ಪ್ರಹ್ಲಾದ ವೆಂಕಟೇಶ್ ಜೋಶಿ
ಪ್ರಹ್ಲಾದ ವೆಂಕಟೇಶ್ ಜೋಶಿ(ಜನನ 27 ನವೆಂಬರ್ 1962) ಅವರು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾರೆ, ಅವರು ಮೇ 30, 2019 ರಿಂದ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿದ್ದಾರೆ, 2004 ರಿಂದ, ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 2014 ರಿಂದ 2016 ರವರೆಗೆ ಕರ್ನಾಟಕದ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯ ಅಧ್ಯಕ್ಷರಾಗಿದ್ದರು. ಲೋಕಸಭೆಯ (2014-2018) ಅಧ್ಯಕ್ಷರ ಸಮಿತಿಯಲ್ಲಿ ಸೇವೆ ಸಲ್ಲಿಸಿದರು.
2004 ಏಪ್ರಿಲ್ ತಿಂಗಳಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಧಾರವಾಡ ಉತ್ತರ ಮತ ಕ್ಷೇತ್ರದಿಂದ ಈ ನಾಡಿನ ಜನತೆಯ ಆಶೀರ್ವಾದದಿಂದ ಅತೀ ಹೆಚ್ಚು ಮತಗಳನ್ನು ಪಡೆದು ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಶ್ರೀ ಪ್ರಹ್ಲಾದ ಜೋಶಿ 14 ನೇ ಲೋಕ ಸಭೆಯಲ್ಲಿ ಧಾರವಾಡ ಉತ್ತರ ಭಾಗವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಇದರ ಫಲಶೃತಿಯಾಗಿ 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೃಹತ್ ಮತಗಳ ಅಂತರದಿಂದ ಗೆಲವು ಪಡೆದು ದ್ವಿತೀಯ ಬಾರಿಗೆ ಸಂಸತ್ತಿಗೆ ಚುನಾಯಿತರಾದರು.
ಶ್ರೀ ಪ್ರಹ್ಲಾದ ಜೋಶಿಯವರು ದಿನಾಂಕ 27-11-1962 ರಲ್ಲಿ ವಿಜಾಪೂರದಲ್ಲಿ ಜನಿಸಿದರು. ತಂದೆ ದಿವಂಗತ ಶ್ರೀ ವೆಂಕಟೇಶ ಜೋಶಿ ರೈಲ್ವೆ ನೌಕರರಾಗಿದ್ದರು. ತಾಯಿ ಶ್ರೀಮತಿ ಮಾಲತಿಬಾಯಿ. ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕುಲಗೋಡ ಗ್ರಾಮದವರು ಇವರ ತಂದೆ ರೈಲ್ವೆ ನೌಕರರಾಗಿದ್ದರಿಂದ ವಿಜಾಪುರಕ್ಕೆ ಹೋಗಿದ್ದರು
ಪ್ರಾಥಮಿಕ ಶಿಕ್ಷಣವನ್ನು ರೈಲ್ವೆ ಶಾಲೆಯಲ್ಲಿ ಪೂರೈಸಿದರು, ಮಾಧ್ಯಮಿಕ ಶಿಕ್ಷಣವನ್ನು ನಗರದ ನ್ಯೂ ಇಂಗ್ಲೀಷ ಸ್ಕೂಲಿನಲ್ಲಿ ಪೂರೈಸಿದರು. ತಮ್ಮ ಬಿ.ಎ. ಪದವಿಯನ್ನು ಪ್ರತಿಷ್ಟಿತ ಕೆಎಲ್ಇ ಸಂಸ್ಥೆಯ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದಿಂದ ಪಡೆದುಕೊಂಡರು.
9 ವರ್ಷದ ಬಾಲಕನಾಗಿದ್ದಾಗಲೆ ರಾಷ್ಟ್ರೀಯ ಸ್ವಯಂ ಸೇವಕರಾಗಿ (ಆರ್.ಎಸ್.ಎಸ್.) ಸಂಘದ ಪ್ರಾಥಮಿಕ ಹಂತದಿಂದ ಪ್ರಾರಂಭಿಸಿ ಸಂಘದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದರು. ನಾಡಿನ ಹೆಮ್ಮೆಯ ಪತ್ರಿಕೆಯಾದ ಸಂಯುಕ್ತ ಕರ್ನಾಟಕ ಹೊರ ತರುತ್ತಿರುವ ಲೋಕ ಶಿಕ್ಷಣ ಟ್ರಸ್ಟಿನ ಧರ್ಮದರ್ಶಿಯಾಗಿ (ಟ್ರಸ್ಟಿ) ಕಾರ್ಯನಿರ್ವಹಿಸಿದ್ದಾರೆ. ನಾ.ಸು. ಹರ್ಡೀಕರ ಸ್ಥಾಪಿಸಿದ ಹುಬ್ಬಳ್ಳಿ ಎಜ್ಯುಕೇಶನ್ ಸೊಸೈಟಿಯ ಹಾಗೂ ಶ್ರೀಮತಿ ವಿದ್ಯಾ ಹಂಚಿನಮನಿ ಪಿಯು ಕಾಲೇಜಿನ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದ್ಯೋಗದೊಂದಿಗೆ ಸದಾ ಚಟುವಟಿಕೆಯಿಂದ ಇರಬಯಸುವ ಇವರು 1992 ರಲ್ಲಿಆರಂಭಗೊಂಡ ಮುರಳಿ ಮನೋಹರ ಜೋಶಿಯವರ ನೇತೃತ್ವದ ಕಾಶ್ಮೀರ ಉಳಿಸಿ ಆಂದೋಲನದ ಅಡಿಯಲ್ಲಿ ಸ್ಥಳೀಯ ಆಂದೋಲನ ಸಮಿತಿಯ ನೇತೃತ್ವ ವಹಿಸುವದರೊಂದಿಗೆ ರಾಜಕೀಯ ರಂಗ ಪ್ರವೇಶಿಸಿದರು.
1992 ಜನವರಿ 26 ರಂದು ಹುಬ್ಬಳ್ಳಿಯ ಕಿತ್ತೂರಾಣಿ ಚೆನ್ನಮ್ಮ ಮೈದಾನ (ಈದ್ಗಾ ಬಳಿ) ದಲ್ಲಿ ಧ್ವಜ ಹಾರಿಸುವ ಸಂಕಲ್ಪದೊಂದಿಗೆ ಹೋರಾಟಕ್ಕೆ ಇಳಿದಾಗ ಅನೇಕ ಅಡೆತಡೆಗಳುಂಟಾದವು. ಗೋಲಿಬಾರ್-ಲಾಠಿ ಏಟಿನ ಪರಿವೇ ಇಲ್ಲದೇ ರಾಷ್ಟ್ರಧ್ವಜ ಗೌರವ ಸಂರಕ್ಷಣಾ ಸಮಿತಿಯ ನೇತೃತ್ವ ವಹಿಸಿದ ಜೋಶಿಯವರು ಕಿತ್ತೂರು ಚೆನ್ನಮ್ಮ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವಲ್ಲಿ ಸಫಲರಾದರು. ಅಂದಿನಿಂದಲೇ ಈ ಭಾಗದ ಜನಮಾಸದಲ್ಲಿ ಒಬ್ಬ ಹೋರಾಟಗಾರನಾಗಿ, ಸೃಜನಶೀಲ ಯುವಕನಾಗಿ ಸ್ಥಾನ ಪಡೆದ ಇವರು ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆಯ ಅಧ್ಯಕ್ಷರಾಗಿ ಪಕ್ಷದ ನೆಲೆಯನ್ನು ಭದ್ರಗೊಳಿಸುವಲ್ಲಿ ಶ್ರಮಿಸಿದರು. ಒಂದು ರಾಜಕೀಯ ಪಕ್ಷದ ಪ್ರಮುಖರಾಗಿ ತಮ್ಮನ್ನು ಗುರುತಿಸಿಕೊಂಡರೂ ಸಹ ಈ ಭಾಗದ ಎಲ್ಲ ಕ್ಷೇತ್ರಗಳ ಪ್ರಮುಖರಿಂದ ಹಿಡಿದು-ಸಾಮಾನ್ಯ ಜನರವರೆಗೆ ಪ್ರಹ್ಲಾದ ಜೋಶಿ ನಮ್ಮವನೇ ಎಂಬ ಛಾಪನ್ನು ಮೂಡಿಸಿದವರು.
ಇದಲ್ಲದೆ 4 ವರ್ಷ ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿ ಪಕ್ಷದ ಸಂಘಟನೆ ಹಾಗೂ ಪಕ್ಷದ ದೈನಂದಿನ ಚಟುವಟಿಕೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.
ಲೋಕ ಸಭೆಯ ರೈಲ್ವೆ ಸ್ಟ್ಯಾಂಡಿಂಗ್ ಕಮೀಟಿ ಹಾಗೂ ಎಸ್ಟಿಮೇಟ್ ಸದಸ್ಯರಾಗಿ ಮತ್ತು ತಂಬಾಕು ಮಂಡಳಿಯ ನಿರ್ದೇಶಕರಲ್ಲಿ ಕೂಡ ಒಬ್ಬರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕನ್ನಡದ ಹೆಮ್ಮೆಯ ವರಕವಿ ಡಾ ದ.ರಾ. ಬೇಂದ್ರೆಯವರ ಸ್ಮರಣಾರ್ಥ ಧಾರವಾಡದಲ್ಲಿ ‘ಬಾರೋ ಸಾಧನ ಕೇರಿಗೆ’ ಎಂಬ ವಿಶೇಷ ಯೋಜನೆ ಅನುಷ್ಠಾನದಲ್ಲಿ ಸತತ ಪ್ರಯತ್ನದಿಂದ ಕೇಂದ್ರ ಸರಕಾರದಿಂದ ರೂ 3.80 ಕೋಟಿಗಳ ಅನುದಾನ ದೊರಕಿಸುವಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ. ಇದರ ಫಲಶೃತಿಯಾಗಿ ಸಾಧನಕೇರಿಯಲ್ಲಿ ಇಂದು ಸುಂದರ ಉದ್ಯಾನವನ ಹಾಗೂ ಸಾಧನಕೇರಿ ಕೆರೆ ಮೈದಳೆದು ನಿಂತಿದೆ.
ಸಂಸತ್ ಸದಸ್ಯರಾಗಿ ಈ ಭಾಗದ ಜನರ ಆಶೋತ್ತರಗಳಿಗೆ ಸದಾ ಸ್ಪಂಧಿಸುತ್ತಿರುವ ಶ್ರೀ ಜೋಶಿಯವರು ಈ ನಾಡಿನ ಜನತೆಯ ಹಲವಾರು ಸಮಸ್ಯೆಗಳನ್ನು ಲೋಕಸಭೆಯಲ್ಲಿ ತಂದು ಇಡೀ ರಾಷ್ಟ್ರದ ಗಮನವನ್ನು ಸೆಳೆಯುತ್ತಿದ್ದಾರೆ. ಬೆಳೆವಿಮೆ, ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಸೌಲಭ್ಯ, ಉಳ್ಳಾಗಡ್ಡಿ, ಮೆಣಸಿನಕಾಯಿ, ಗೋವಿನಜೋಳ, ಖರೀದಿ ಕೇಂದ್ರಗಳ ವಿಷಯವಾಗಿ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ, ಬಿಜಾಪೂರ-ಗದಗ ಬ್ರಾಡ್ಗೇಜ್ ಯೋಜನೆ, ಧಾರವಾಡ-ಅಳ್ನಾವರ ರಸ್ತೆ ದುರಸ್ಥಿ, ಧಾರವಾಡ-ಹುಬ್ಬಳ್ಳಿ-ಗದಗ ನಗರಗಳ ಸೌಂಧರ್ಯಿಕರಣ, ಪ್ರತಿ ಹಳ್ಳಿ ಹಾಗೂ ಶಹರಗಳಲ್ಲಿ ಸಾರ್ವಜನಿಕ ಸೌಲಭ್ಯ, ಮೂಲಭೂತ ಸೌಲಭ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ತಮ್ಮ ಧ್ವನಿಯನ್ನು ಎತ್ತುತ್ತಲೇ ಇದ್ದಾರೆ. ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು (ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಶಾಲಾ ಕೊಠಡಿಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ರಸ್ತೆ ನಿರ್ಮಾಣ ,ಉದ್ಯಾನವನಗಳ ಸೌಂದರ್ಯೀಕರಣ, ಒಳಚರಂಡಿ ವ್ಯವಸ್ಥೆ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ಸತತ ಪ್ರಯತ್ನ ನಡೆಸಿ ಕರ್ನಾಟಕ ಸರಕಾರದಿಂದ ಸುಮಾರು 700 ಎಕರೆ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇವರಿಗೆ ಭೂಮಿಯನ್ನು ಹಸ್ತಾಂತರಿಸಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದ್ದಾರೆ. ಹುಬ್ಬಳ್ಳಿ ರೈಲ್ವೆ ವರ್ಕ್ಶಾಪ್ ಆಧುನೀಕರಣ, ಹುಬ್ಬಳ್ಳಿ ಗೂಡ್ಸ್ ಶೆಡ್ ನಿರ್ಮಾಣ, ಹುಬ್ಬಳ್ಳಿ ರೈಲ್ವೆ ನಿಲ್ದಾಣ ನವೀಕರಣ ಇತ್ಯಾದಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಶ್ರೀ ಜೋಶಿ ಅವರು ಚಾಲನೆ ದೊರಕಿಸಿದ್ದಾರೆ.